ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ಅಲ್ಲಾಹು ನಿಮಗೆ ಅಧೀನಗೊಳಿಸಿದ್ದಾನೆಂದು ನೀವು ನೋಡಿಲ್ಲವೇ? ಅವನು ನಿಮಗೆ ಗೋಚರ ಮತ್ತು ಅಗೋಚರವಾದ ಹೇರಳ ಅನುಗ್ರಹಗಳನ್ನು ದಯಪಾಲಿಸಿದ್ದಾನೆ. ಜನರಲ್ಲಿ ಕೆಲವರಿದ್ದಾರೆ. ಅವರು ಯಾವುದೇ ಜ್ಞಾನ, ಮಾರ್ಗದರ್ಶನ ಅಥವಾ ಬೆಳಕು ನೀಡುವ ಗ್ರಂಥದ ಆಧಾರವಿಲ್ಲದೆ ಅಲ್ಲಾಹನ ಬಗ್ಗೆ ತರ್ಕಿಸುತ್ತಾರೆ.
“ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅನುಸರಿಸಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ಇಲ್ಲ, ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದಾಗಿ ನಾವು ಕಂಡಿದ್ದೇವೆಯೋ ಆ ಮಾರ್ಗವನ್ನೇ ನಾವು ಅನುಸರಿಸುತ್ತೇವೆ.” ಶೈತಾನನು ಅವರನ್ನು (ಅವರ ಪೂರ್ವಜರನ್ನು) ಜ್ವಲಿಸುವ ನರಕಕ್ಕೆ ಕರೆಯುತ್ತಿದ್ದರೂ (ಅವರು ಅವರನ್ನೇ ಅನುಸರಿಸುವರೇ?)
ಯಾರು ಒಳಿತು ಮಾಡುವವನಾಗಿದ್ದು ತನ್ನ ಮುಖವನ್ನು ಅಲ್ಲಾಹನಿಗೆ ಶರಣಾಗಿಸುತ್ತಾನೋ ಅವನು ಬಲಿಷ್ಠ ಹಿಡಿಕೆಯನ್ನು ಹಿಡಿದಿದ್ದಾನೆ. ಎಲ್ಲಾ ವಿಷಯಗಳ ಅಂತಿಮ ಫಲಿತಾಂಶವು ಅಲ್ಲಾಹನ ಬಳಿಗೇ ಆಗಿದೆ.
ಯಾರಾದರೂ ಸತ್ಯನಿಷೇಧಿಯಾದರೆ ಅವನ ಸತ್ಯನಿಷೇಧವು ನಿಮ್ಮನ್ನು ಬೇಸರಪಡಿಸದಿರಲಿ. ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ. ಆಗ ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಾವು ಅವರಿಗೆ ತಿಳಿಸಿಕೊಡುವೆವು. ನಿಶ್ಚಯವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.
“ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಯಾರು?” ಎಂದು ನೀವು ಅವರೊಡನೆ ಕೇಳಿದರೆ ಅವರು ಖಂಡಿತವಾಗಿಯೂ “ಅಲ್ಲಾಹು” ಎಂದೇ ಹೇಳುತ್ತಾರೆ. ಹೇಳಿರಿ: “ಅಲ್ಲಾಹನಿಗೆ ಸರ್ವಸ್ತುತಿ.” ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
ಭೂಮಿಯಲ್ಲಿರುವ ಮರಗಳೆಲ್ಲವೂ ಲೇಖನಿಗಳಾಗಿ ಮತ್ತು ಸಮುದ್ರವು ಶಾಯಿಯಾಗಿ ಮಾರ್ಪಟ್ಟು, ನಂತರ ಏಳು ಸಮುದ್ರಗಳು ಬೇರೆಯಿದ್ದರೂ ಅಲ್ಲಾಹನ ವಚನಗಳನ್ನು ಬರೆದು ಮುಗಿಸಲು ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
ನಿಮ್ಮನ್ನು ಸೃಷ್ಟಿಸುವುದು ಮತ್ತು ನಿಮಗೆ ಪುನಃ ಜೀವ ನೀಡಿ ಎಬ್ಬಿಸುವುದು ಕೇವಲ ಒಬ್ಬ ವ್ಯಕ್ತಿಗೆ ಸಮಾನವಾಗಿದೆ.[1] ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
[1] ಅಂದರೆ ಸಹಸ್ರಕೋಟಿ ಮಾನವರನ್ನು ಸೃಷ್ಟಿಸಿ, ಅವರನ್ನು ಮೃತಪಡಿಸಿ, ನಂತರ ಪುನರುತ್ಥಾನ ದಿನದಂದು ಅವರಿಗೆ ಪುನಃ ಜೀವ ನೀಡಿ ಎಬ್ಬಿಸುವುದು ಅಲ್ಲಾಹನಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಸೃಷ್ಟಿಸಿ, ಅವನನ್ನು ಮೃತಪಡಿಸಿ, ಅವನಿಗೆ ಪುನಃ ಜೀವ ನೀಡುವುದಕ್ಕೆ ಸಮಾನವಾಗಿದೆ.