(ಓ ಸತ್ಯವಿಶ್ವಾಸಿಗಳೇ) ನೀವು ಒಪ್ಪಂದ ಮಾಡಿಕೊಂಡಿರುವ ಬಹುದೇವ ವಿಶ್ವಾಸಿಗಳಿಗೆ (ಅವರ ಒಪ್ಪಂದ ಉಲ್ಲಂಘನೆಯ ಕಾರಣ) ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ಒಪ್ಪಂದ ರದ್ದತಿಯ ಘೋಷಣೆಯಾಗಿದೆ.
ಆದ್ದರಿಂದ (ಓ ಬಹುದೇವ ಆರಾಧಕರೇ) ನೀವು ಭೂಮಿಯಲ್ಲಿ ನಾಲ್ಕು ತಿಂಗಳ ಕಾಲ ಸಂಚರಿಸಿರಿ. ನೀವು ಅಲ್ಲಾಹನನ್ನು ಸೋಲಿಸುವವರಲ್ಲವೆಂದು ಮತ್ತು ಅಲ್ಲಾಹನು ಸತ್ಯನಿಷೇಧಿಗಳಿಗೆ ಅಪಮಾನಿಸಲಿರುವನೆಂದು ತಿಳಿದುಕೊಳ್ಳಿರಿ.
ಅಲ್ಲಾಹ್ ಮತ್ತು ಅವನ ಸಂದೇಶವಾಹಕರು (ಒಪ್ಪಂದ ಉಲ್ಲಂಘನೆ ಮಾಡಿರುವ) ಬಹುದೇವರಾಧಕರಿಂದ ಹೊಣೆ ಮುಕ್ತರಾಗಿದ್ದಾರೆ ಎಂದು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ಜನರಿಗೆ ಮಹಾಹಜ್ಜ್ನ ದಿನ ಸ್ಪಷ್ಟವಾಗಿ ಸಾರಲಾಗುತ್ತಿರುವ ಘೋಷಣೆಯಿದು. ಇನ್ನು ನೀವು ಪಶ್ಚಾತ್ತಾಪ ಪಟ್ಟರೆ ಅದು ನಿಮ್ಮ ಪಾಲಿಗೆ ಅತ್ಯತ್ತಮವಾಗಿದೆ. ಮತ್ತು ನೀವು ವಿಮುಖರಾಗುವುದಾದರೆ ಅಲ್ಲಾಹನನ್ನು ಪರಾಭವ ಗೊಳಿಸಲು ನಿಮಗೆ ಸಾಧ್ಯವಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ಓ ಪೈಗಂಬರರೇ ಸತ್ಯನಿಷೇಧಿಗಳಿಗೆ ವೇದನಾಜನಕವಾದ ಶಿಕ್ಷೆಯ ಶುಭವಾರ್ತೆಯನ್ನು ತಿಳಿಸಿರಿ.
ಆದರೆ ಬಹುದೇವರಾಧಕರ ಪೈಕಿ ಯಾರೊಂದಿಗೆ ನಿಮ್ಮ ಒಪ್ಪಂದವಾಗಿರುವವರ ಹೊರತು ಮತ್ತು ಅವರು ನಿಮ್ಮೊಂದಿಗೆ ತಮ್ಮ ಒಪ್ಪಂದದಲ್ಲಿ ಯಾವುದೇ ಲೋಪವನ್ನಾಗಲೀ, ನಿಮ್ಮ ವಿರುದ್ಧ ಯಾರಿಗೂ ಸಹಾಯವನ್ನಾಗಲೀ ಮಾಡುವುದಿಲ್ಲವಾದರೆ ನೀವು ಅವರ ಒಪ್ಪಂದದ ಅವಧಿಯನ್ನು ಪೂರ್ಣಗೊಳಿಸಿರಿ. ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಮೆಚ್ಚುತ್ತಾನೆ.
ಅನಂತರ ನಿಷಿದ್ಧ ತಿಂಗಳುಗಳು ಮುಗಿದ ಕೂಡಲೇ (ಒಪ್ಪಂದ ಉಲ್ಲಂಘಿಸಿದ ಖುರೈಶ್) ಬಹುದೇವಾರಾದಕರನ್ನು ಕಂಡಲ್ಲಿ ವಧಿಸಿರಿ. ಅವರನ್ನು ಸೆರೆಹಿಡಿಯಿರಿ, ಅವರಿಗೆ ಮುತ್ತಿಗೆ ಹಾಕಿರಿ ಮತ್ತು ಅವರನ್ನು ಹಿಡಿಯಲ್ಲಿಕ್ಕಾಗಿ ಪ್ರತಿಯೊಂದು ಹೊಂಚಿನ ಸ್ಥಳದಲ್ಲಿ ಹೊಂಚುಹಾಕಿರಿ. ಇನ್ನು ಅವರು ಪಶ್ಚಾತ್ತಾಪ ಪಟ್ಟರೆ ಮತ್ತು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ಪಾವತಿಸಿದರೆ ನೀವವರ ದಾರಿಯನ್ನು ಬಿಟ್ಟುಬಿಡಿರಿ. ಖಂಡಿತವಾಗಿಯು ಅಲ್ಲಾಹನು ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮಲ್ಲಿ ಅಭಯ ಕೇಳಿದರೆ ಅವನಿಗೆ ಅಭಯ ಕೊಡಿರಿ. ಅವನು ಅಲ್ಲಾಹನ ವಚನಗಳನ್ನು ಕೇಳಿಕೊಳ್ಳಲಿ ನಂತರ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿಬಿಡಿರಿ. ಇದೇಕೆಂದರೆ ಅವರು ತಿಳುವಳಿಕೆಯಿಲ್ಲದ ಜನರಾಗಿದ್ದಾರೆ.