ಜನರಿಗೆ ಎಚ್ಚರಿಕೆ ನೀಡಲಿಕ್ಕೆ ಮತ್ತು ಸತ್ಯವಿಶ್ವಾಸವಿರಿಸಿದವರಿಗೆ ಅವರ ಪ್ರಭುವಿನ ಬಳಿ ಸತ್ಯದ ಉನ್ನತ ಸ್ಥಾನವಿದೆಯೆಂದು, ಸುವಾರ್ತೆ ನೀಡಲಿಕ್ಕೆ ಅವರ ಪೈಕಿ ಒಬ್ಬ ವ್ಯಕ್ತಿಯ ಕಡೆಗೆ ನಾವು ದಿವ್ಯಸಂದೇಶ ಕಳುಹಿಸಿರುವುದು ಜನರಿಗೆ ಆಶ್ಚರ್ಯವಾಯಿತೇ? ಸತ್ಯನಿಷೇಧಿಗಳು ಹೇಳಿದರು : ನಿಶ್ಚಯವಾಗಿಯೂ ಈ ವ್ಯಕ್ತಿ ಸ್ಪಷ್ಟ ಜಾದೂಗಾರನಾಗಿದ್ದಾನೆ.
ನಿಸ್ಸಂದೇಹವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿ ತರುವಾಯ ಸಿಂಹಾಸನದ ಮೇಲೆ ಆರೂಢನಾಗಿ ಸಕಲ ಕಾರ್ಯಗಳನ್ನು ನಿಯಂತ್ರಿಸುವ ನಿಮ್ಮ ಪ್ರಭು ಅಲ್ಲಾಹನೇ ಆಗಿದ್ದಾನೆ. ಅವನ ಅನುಮತಿಯ ಹೊರತು ಯಾವೊಬ್ಬನೂ ಅವನ ಬಳಿ ಶಿಫಾರಸ್ಸು ಮಾಡುವವನಿಲ್ಲ. ಅವನೇ ನಿಮ್ಮ ಪ್ರಭುವಾದ ಅಲ್ಲಾಹನು, ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ, ಹೀಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
ನಿಮಗೆಲ್ಲರಿಗೂ ಅವನೆಡೆಗೇ ಮರಳಬೇಕಾಗಿದೆ, ಇದು ಅಲ್ಲಾಹನ ಸತ್ಯವಾಗ್ದಾನವಾಗಿದೆ, ನಿಸ್ಸಂಶಯವಾಗಿಯು ಅವನೇ ಸೃಷ್ಟಿಯನ್ನು ಆರಂಭಿಸುತ್ತಾನೆ, ಅನಂತರ ಅವನೇ ಪುನರಾವರ್ತಿಸುವನು, ಇದು ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ಕರ್ಮಗಳನ್ನೆಸಗಿದವರಿಗೆ ನ್ಯಾಯೋಚಿತ ಪ್ರತಿಫಲ ನೀಡಲೆಂದಾಗಿದೆ ಮತ್ತು ಸತ್ಯ ನಿಷೇಧಿಸಿದವರಿಗೆ ಅವರ ಸತ್ಯನಿಷೇಧದ ನಿಮಿತ್ತ ಅವರಿಗೆ ಕುಡಿಯಲು ಕುದಿಯುವ ನೀರು ಮತ್ತು ವೇದನಾಜನಕ ಯಾತನೆ ಇರುವುದು.
ಅವನೇ ಸೂರ್ಯನನ್ನು ಪ್ರಜ್ವಲಿಸುವಂತೆಯೂ ಚಂದ್ರನನ್ನು ಪ್ರತಿಫಲಿಸುವಂತೆಯೂ ಮಾಡಿದನು ಮತ್ತು ಅದಕ್ಕೆ ಹಂತಗಳನ್ನು ನಿಶ್ಚಯಿಸಿದನು, ಇದು ನೀವು ವರ್ಷಗಳ ಗಣನೆ ಮತ್ತು ಲೆಕ್ಕವನ್ನು ಅರಿತುಕೊಳ್ಳಲೆಂದಾಗಿದೆ. ಅಲ್ಲಾಹನು ಇವುಗಳನ್ನು ಸತ್ಯದೊಂದಿಗೆ ಸೃಷ್ಟಿಸಿದ್ದಾನೆ. ಅವನು ಈ ಪುರಾವೆಗಳನ್ನೆಲ್ಲಾ ಬುದ್ಧಿಮತಿಯನ್ನು ಹೊಂದಿರುವವರಿಗೆ ಸ್ಪಷ್ಟವಾಗಿ ವಿವರಿಸಿ ಕೊಡುತ್ತಾನೆ.
ನಿಸ್ಸಂದೇಹವಾಗಿಯೂ ರಾತ್ರಿ ಹಗಲುಗಳ ಒಂದರಹಿAದೆ ಇನ್ನೊಂದರ ಆಗಮನದಲ್ಲೂ, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅಲ್ಲಾಹನು ಸೃಷ್ಟಿಸಿರುವ ವಸ್ತುಗಳಲ್ಲೂ, ಭಯಭಕ್ತಿ ಹೊಂದಿದವರಿಗೆ ನಿದರ್ಶನಗಳಿವೆ.