Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು * - ಅನುವಾದಗಳ ವಿಷಯಸೂಚಿ

PDF XML CSV Excel API
Please review the Terms and Policies

ಅರ್ಥಗಳ ಅನುವಾದ ಅಧ್ಯಾಯ: ಅಲ್- ಬಕರ   ಶ್ಲೋಕ:
وَلَمَّا جَآءَهُمْ كِتٰبٌ مِّنْ عِنْدِ اللّٰهِ مُصَدِّقٌ لِّمَا مَعَهُمْ ۙ— وَكَانُوْا مِنْ قَبْلُ یَسْتَفْتِحُوْنَ عَلَی الَّذِیْنَ كَفَرُوْا ۚ— فَلَمَّا جَآءَهُمْ مَّا عَرَفُوْا كَفَرُوْا بِهٖ ؗ— فَلَعْنَةُ اللّٰهِ عَلَی الْكٰفِرِیْنَ ۟
ಅವರಲ್ಲಿರುವ (ಗ್ರಂಥವನ್ನು) ದೃಢೀಕರಿಸುವ ಒಂದು ಗ್ರಂಥವು (ಕುರ್‌ಆನ್) ಅಲ್ಲಾಹನ ಬಳಿಯಿಂದ ಅವರಿಗೆ ಬಂದಾಗ—ವಾಸ್ತವವಾಗಿ, ಇದಕ್ಕೆ ಮೊದಲು ಅವರು (ಅಂತಹ ಒಂದು ಗ್ರಂಥದ ಮೂಲಕ) ಸತ್ಯನಿಷೇಧಿಗಳ ವಿರುದ್ಧ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರೂ ಸಹ—ಅವರಿಗೆ ಪರಿಚಿತವಾದ ಆ ಸಂದೇಶವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು.[1] ಆದ್ದರಿಂದ ಸತ್ಯನಿಷೇಧಿಗಳ ಮೇಲೆ ಅಲ್ಲಾಹನ ಶಾಪವಿರಲಿ.
[1] ಬಹುದೇವವಿಶ್ವಾಸಿಗಳೊಡನೆ ಯುದ್ಧ ನಡೆಯುವಾಗಲೆಲ್ಲಾ ಅವರು ಹೀಗೆ ಪ್ರಾರ್ಥಿಸುತ್ತಿದ್ದರು: "ಓ ಅಲ್ಲಾಹ್! ಅಂತಿಮ ಪ್ರವಾದಿಯನ್ನು ಬೇಗನೇ ಕಳುಹಿಸು. ನಾವು ಆ ಪ್ರವಾದಿಯೊಂದಿಗೆ ಸೇರಿ ಈ ಬಹುದೇವವಿಶ್ವಾಸಿಗಳ ವಿರುದ್ಧ ಗೆಲುವು ಪಡೆಯುತ್ತೇವೆ." ಆದರೆ ಅಂತಿಮ ಪ್ರವಾದಿ ಬಂದಾಗ ಅವರು ಆ ಪ್ರವಾದಿಯ ಸಂದೇಶವನ್ನು (ಕುರ್‌ಆನನ್ನು) ತಿರಸ್ಕರಿಸಿ ಅವರ ವಿರುದ್ಧವೇ ದ್ವೇಷ ಕಟ್ಟಿಕೊಂಡರು.
ಅರಬ್ಬಿ ವ್ಯಾಖ್ಯಾನಗಳು:
بِئْسَمَا اشْتَرَوْا بِهٖۤ اَنْفُسَهُمْ اَنْ یَّكْفُرُوْا بِمَاۤ اَنْزَلَ اللّٰهُ بَغْیًا اَنْ یُّنَزِّلَ اللّٰهُ مِنْ فَضْلِهٖ عَلٰی مَنْ یَّشَآءُ مِنْ عِبَادِهٖ ۚ— فَبَآءُوْ بِغَضَبٍ عَلٰی غَضَبٍ ؕ— وَلِلْكٰفِرِیْنَ عَذَابٌ مُّهِیْنٌ ۟
ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅವನ ಔದಾರ್ಯವನ್ನು ಇಳಿಸಿಕೊಡುತ್ತಾನೆ ಎಂಬ ಅಸೂಯೆಯಿಂದ, ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶವನ್ನು ನಿಷೇಧಿಸುವ ರೀತಿಯಲ್ಲಿ ಅವರು ತಮ್ಮನ್ನು ತಾವೇ ಮಾರಿಕೊಂಡದ್ದು ಬಹಳ ನಿಕೃಷ್ಟವಾಗಿದೆ.[1] ಇದರಿಂದ ಅವರು ಕೋಪದ ಮೇಲೆ ಕೋಪಕ್ಕೆ ಪಾತ್ರರಾದರು. ಆ ಸತ್ಯನಿಷೇಧಿಗಳಿಗೆ ಅಪಮಾನಕರ ಶಿಕ್ಷೆಯಿದೆ.
[1] ಯಹೂದಿಗಳು ಅಂತಿಮ ಪ್ರವಾದಿಯ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಅಂತಿಮ ಪ್ರವಾದಿಯ ಎಲ್ಲಾ ಗುಣಲಕ್ಷಣಗಳನ್ನು ಅವರ ಗ್ರಂಥಗಳಲ್ಲಿ ವಿವರಿಸಲಾಗಿತ್ತು. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಲ್ಲಿ ಈ ಎಲ್ಲಾ ಗುಣಲಕ್ಷಣಗಳಿದ್ದವು ಮತ್ತು ಅವರು ಅಂತಿಮ ಪ್ರವಾದಿಯೆಂದು ಯಹೂದಿಗಳಿಗೆ ಸಂಪೂರ್ಣ ಖಾತ್ರಿಯಿತ್ತು. ಆದರೆ ಅವರ ನಿರೀಕ್ಷೆಯಂತೆ ಆ ಪ್ರವಾದಿ ಯಹೂದಿ ವಂಶದಲ್ಲಿ ಹುಟ್ಟಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅವರು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಮತ್ತು ಅವರು ತಂದ ಸಂದೇಶವನ್ನು ತಿರಸ್ಕರಿಸಿದರು.
ಅರಬ್ಬಿ ವ್ಯಾಖ್ಯಾನಗಳು:
وَاِذَا قِیْلَ لَهُمْ اٰمِنُوْا بِمَاۤ اَنْزَلَ اللّٰهُ قَالُوْا نُؤْمِنُ بِمَاۤ اُنْزِلَ عَلَیْنَا وَیَكْفُرُوْنَ بِمَا وَرَآءَهٗ ۗ— وَهُوَ الْحَقُّ مُصَدِّقًا لِّمَا مَعَهُمْ ؕ— قُلْ فَلِمَ تَقْتُلُوْنَ اَنْۢبِیَآءَ اللّٰهِ مِنْ قَبْلُ اِنْ كُنْتُمْ مُّؤْمِنِیْنَ ۟
“ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಮಗೆ ಅವತೀರ್ಣವಾದ ಗ್ರಂಥದಲ್ಲಿ ನಾವು ವಿಶ್ವಾಸವಿಡುತ್ತೇವೆ.” ವಾಸ್ತವವಾಗಿ, ಅದರ ನಂತರದ ಗ್ರಂಥವು (ಕುರ್‌ಆನ್) ಅವರ ಬಳಿಯಿರುವ ಗ್ರಂಥವನ್ನು ದೃಡೀಕರಿಸುವ ಸತ್ಯವಾಗಿದ್ದೂ ಸಹ ಅವರು ಅದನ್ನು ನಿಷೇಧಿಸುತ್ತಾರೆ. ಹೇಳಿರಿ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ, ಮೊದಲು ಬಂದ ಅಲ್ಲಾಹನ ಪ್ರವಾದಿಗಳನ್ನು ನೀವೇಕೆ ಕೊಲೆ ಮಾಡಿದಿರಿ?”[1]
[1] ನಾವು ತೌರಾತ್ (ತೋರಾ) ನಲ್ಲಿ ವಿಶ್ವಾಸವಿಟ್ಟಿದ್ದೇವೆ, ಆದ್ದರಿಂದ ನಮಗೆ ಕುರ್‌ಆನ್‌ನಲ್ಲಿ ವಿಶ್ವಾಸವಿಡಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ ವಾಸ್ತವವಾಗಿ ಅವರು ತೌರಾತ್‌ನಲ್ಲೂ ಸರಿಯಾಗಿ ವಿಶ್ವಾಸವಿಟ್ಟಿರಲಿಲ್ಲ. ತೌರಾತ್‌ನಲ್ಲಿ ವಿಶ್ವಾಸವಿಟ್ಟಿದ್ದೇವೆಂಬ ಅವರ ಮಾತು ಸತ್ಯವಾಗಿದ್ದರೆ ಅವರು ತೌರಾತನ್ನು ಬೋಧಿಸಲು ಬಂದ ಪ್ರವಾದಿಗಳನ್ನು ಕೊಲೆ ಮಾಡುತ್ತಿರಲಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَلَقَدْ جَآءَكُمْ مُّوْسٰی بِالْبَیِّنٰتِ ثُمَّ اتَّخَذْتُمُ الْعِجْلَ مِنْ بَعْدِهٖ وَاَنْتُمْ ظٰلِمُوْنَ ۟
ನಿಶ್ಚಯವಾಗಿಯೂ, ಮೂಸಾ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ನಂತರ, ಅವರ (ನಿರ್ಗಮನದ) ಬಳಿಕ ನೀವು ಕರುವನ್ನು (ದೇವರಾಗಿ) ಮಾಡಿಕೊಂಡು ಅಕ್ರಮಿಗಳಾಗಿ ಬಿಟ್ಟಿರಿ.
ಅರಬ್ಬಿ ವ್ಯಾಖ್ಯಾನಗಳು:
وَاِذْ اَخَذْنَا مِیْثَاقَكُمْ وَرَفَعْنَا فَوْقَكُمُ الطُّوْرَ ؕ— خُذُوْا مَاۤ اٰتَیْنٰكُمْ بِقُوَّةٍ وَّاسْمَعُوْا ؕ— قَالُوْا سَمِعْنَا وَعَصَیْنَا ۗ— وَاُشْرِبُوْا فِیْ قُلُوْبِهِمُ الْعِجْلَ بِكُفْرِهِمْ ؕ— قُلْ بِئْسَمَا یَاْمُرُكُمْ بِهٖۤ اِیْمَانُكُمْ اِنْ كُنْتُمْ مُّؤْمِنِیْنَ ۟
ನಾವು ನಿಮ್ಮಿಂದ ಕರಾರನ್ನು ಪಡೆದ ಮತ್ತು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದ ಸಂದರ್ಭ. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಕಿವಿಗೊಟ್ಟು ಕೇಳಿರಿ.” ಅವರು ಹೇಳಿದರು: “ನಾವು ಕೇಳಿದ್ದೇವೆ ಮತ್ತು ಅವಿಧೇಯತೆ ತೋರಿದ್ದೇವೆ.” ಅವರ ಸತ್ಯನಿಷೇಧದಿಂದಾಗಿ ಅವರ ಹೃದಯಗಳಲ್ಲಿ ಕರುವಿನ ಪ್ರೀತಿಯು ಲೀನವಾಗಿಬಿಟ್ಟಿತ್ತು. ಹೇಳಿರಿ: “ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಮ್ಮ ವಿಶ್ವಾಸವು ನಿಮಗೆ ಏನು ಆದೇಶಿಸುತ್ತಿದೆಯೋ ಅದು ಬಹಳ ನಿಕೃಷ್ಟವಾಗಿದೆ.”
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಬಕರ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು - ಅನುವಾದಗಳ ವಿಷಯಸೂಚಿ

ಅನುವಾದ - ಮುಹಮ್ಮದ್ ಹಂಝ ಪುತ್ತೂರು ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ