ತನ್ನ ದಾಸನನ್ನು (ಪ್ರವಾದಿಯನ್ನು) ಒಂದೇ ರಾತ್ರಿಯಲ್ಲಿ ಮಸ್ಜಿದ್ ಹರಾಮ್ನಿಂದ (ಮಕ್ಕಾ) ಮಸ್ಜಿದ್ ಅಕ್ಸಾಗೆ (ಜೆರೂಸಲೇಂ) ನಿಶಾಯಾನ ಮಾಡಿಸಿದವನು ಪರಮ ಪರಿಶುದ್ಧನು. ಅದರ (ಮಸ್ಜಿದ್ ಅಕ್ಸಾದ) ಪರಿಸರವನ್ನು ನಾವು ಸಮೃದ್ಧಗೊಳಿಸಿದ್ದೇವೆ. ಇದು ಅವರಿಗೆ ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿಕೊಡುವುದಕ್ಕಾಗಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.[1]
[1] ಅಲ್ಲಾಹು ಪ್ರವಾದಿ ಮುಹಮ್ಮದರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ರಾತ್ರಿಯಲ್ಲಿ ಮಕ್ಕಾದಿಂದ ಪ್ಯಾಲಸ್ತೀನ್ನಲ್ಲಿರುವ ಮಸ್ಜಿದುಲ್ ಅಕ್ಸಾ (ಬೈತುಲ್ ಮುಕದ್ದಿಸ್)ಗೆ, ನಂತರ ಅಲ್ಲಿಂದ ಆಕಾಶಗಳಿಗೆ ಒಯ್ದು, ಬಳಿಕ ಮಕ್ಕಾಗೆ ಮರಳಿಸಿದನು. ಇದೊಂದು ಅಸಾಮಾನ್ಯ ಘಟನೆಯಾಗಿತ್ತು. ಮಸ್ಜಿದುಲ್ ಅಕ್ಸಾದ ವರೆಗಿನ ನಿಶಾಯಾತ್ರೆಯನ್ನು ‘ಇಸ್ರಾ’ ಮತ್ತು ನಂತರ ಜರುಗಿದ ಆಕಾಶಾರೋಹಣವನ್ನು ‘ಮಿಅರಾಜ್’ ಎಂದು ಕರೆಯಲಾಗುತ್ತದೆ.
ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅದನ್ನು ನಾವು ಇಸ್ರಾಯೇಲ್ ಮಕ್ಕಳಿಗೆ ಸನ್ಮಾರ್ಗದರ್ಶಿಯಾಗಿ ಮಾಡಿದೆವು. “ನನ್ನನ್ನು ಬಿಟ್ಟು ಬೇರೆ ಯಾರನ್ನೂ ನೀವು ಕಾರ್ಯನಿರ್ವಾಹಕರನ್ನಾಗಿ ಸ್ವೀಕರಿಸಬೇಡಿ” ಎಂದು (ಅದರಲ್ಲಿ ಆದೇಶಿಸಲಾಗಿತ್ತು).
ಆ ಎರಡು ವಾಗ್ದಾನಗಳಲ್ಲಿ ಮೊದಲನೆಯ ವಾಗ್ದಾನದ ಸಮಯವು ಬಂದಾಗ, ನಾವು ನಿಮ್ಮ ವಿರುದ್ಧ ಮಹಾಶೂರರಾದ ನಮ್ಮ ದಾಸರನ್ನು ಕಳುಹಿಸಿದೆವು. ಅವರು ನಿಮ್ಮನ್ನು ಮನೆ ಮನೆಗಳಲ್ಲಿ ಹುಡುಕಿದರು. ಅಲ್ಲಾಹನ ಈ ವಾಗ್ದಾನವು ನೆರವೇರುವಂತದ್ದೇ ಆಗಿದೆ.[1]
[1] ಕ್ರಿ.ಪೂ. 600 ರಲ್ಲಿ ಬಾಬಿಲೋನಿಯಾದ ಚಕ್ರವರ್ತಿ ಬುಖ್ತ್ ನಸರ್ (ನೆಬೂಕಡ್ನಝರ್) ಜೆರೂಸಲೇಂ ಮೇಲೆ ದಾಳಿ ಮಾಡಿ ಅಸಂಖ್ಯ ಯಹೂದಿಗಳನ್ನು ಕೊಂದು ಅಸಂಖ್ಯ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡ ಕಡೆಗೆ ಇಲ್ಲಿ ಸೂಚನೆ ನೀಡಲಾಗಿದೆ. ಇದು ಯಹೂದಿಗಳು ಅಲ್ಲಾಹನ ಪ್ರವಾದಿಗಳನ್ನು ಕೊಂದು ತೌರಾತನ್ನು ಬಹಿರಂಗವಾಗಿ ಉಲ್ಲಂಘಿಸಿ ವಿಕೃತಿ ಮೆರೆದ ಸಂದರ್ಭದಲ್ಲಾಗಿತ್ತು. ಬುಖ್ತ್ ನಸರ್ ಮಾತ್ರವಲ್ಲದೆ, ಜಾಲೂತ್ (ಗೋಲಿಯತ್) ನ ಕೈಯಲ್ಲೂ ಕೂಡ ಯಹೂದಿಗಳು ಬಗೆ ಬಗೆಯ ಹಿಂಸೆಗಳನ್ನು ಅನುಭವಿಸಿದ್ದರು. ನಂತರ ತಾಲೂತ್ (ಸೌಲ್) ರ ಕಾಲದಲ್ಲಿ ಪ್ರವಾದಿ ದಾವೂದ್ (ಅವರ ಮೇಲೆ ಶಾಂತಿಯಿರಲಿ) ಜಾಲೂತನನ್ನು ಜೆರೂಸಲೇಂ ಅನ್ನು ವಶಪಡಿಸಿದರು.
ನೀವು ಒಳಿತು ಮಾಡಿದರೆ ಅದು ನಿಮ್ಮ ಒಳಿತಿಗೇ ಆಗಿದೆ. ನೀವು ಕೆಡುಕು ಮಾಡಿದರೆ ಅದರ ಪರಿಣಾಮವನ್ನು ನೀವೇ ಅನುಭವಿಸುತ್ತೀರಿ. ಎರಡನೇ ವಾಗ್ದಾನದ ಸಮಯವು ಬಂದಾಗ, ನಿಮ್ಮ ಮುಖಗಳನ್ನು ವಿರೂಪಗೊಳಿಸಲು ಮತ್ತು ಅವರು ಪ್ರಥಮ ಬಾರಿ ಮಸೀದಿಯನ್ನು ಪ್ರವೇಶಿಸಿದಂತೆ ಎರಡನೇ ಬಾರಿಯೂ ಪ್ರವೇಶಿಸಲು ಹಾಗೂ ನಿಮ್ಮ ಅಧಿಕಾರದಲ್ಲಿರುವ ಎಲ್ಲವನ್ನೂ ಸರ್ವನಾಶ ಮಾಡಲು (ನಾವು ನಮ್ಮ ಬೇರೆ ದಾಸರನ್ನು ಕಳುಹಿಸಿದೆವು).[1]
[1] ಯಹೂದಿಗಳು ಪ್ರವಾದಿ ಝಕರಿಯ್ಯಾರನ್ನು (ಅವರ ಮೇಲೆ ಶಾಂತಿಯಿರಲಿ) ಕೊಂದು ನಂತರ ಈಸಾರನ್ನು (ಯೇಸು — ಅವರ ಮೇಲೆ ಶಾಂತಿಯಿರಲಿ) ಕೂಡ ಕೊಲ್ಲಲು ಸಂಚು ನಡೆಸಿದರು. ಆದರೆ ಅಲ್ಲಾಹು ಅವರ ಕೈಯಿಂದ ಈಸಾರನ್ನು (ಅವರ ಮೇಲೆ ಶಾಂತಿಯಿರಲಿ) ರಕ್ಷಿಸಿದನು. ನಂತರ ಕ್ರಿ. ಶ. 70ರಲ್ಲಿ ಅಲ್ಲಾಹು ರೋಮನ್ ದೊರೆ ಟೈಟಸ್ನನ್ನು ಅವರ ವಿರುದ್ಧ ಕಳುಹಿಸಿದನು. ಅವನು ಜೆರೂಸಲೇಂಗೆ ದಾಳಿ ಮಾಡಿ ಯಹೂದಿಗಳ ಒಂದು ದೊಡ್ಡ ಸಂಖ್ಯೆಯನ್ನು ಕೊಂದು ಒಂದು ದೊಡ್ಡ ಸಂಖ್ಯೆಯನ್ನು ಖೈದಿಗಳಾಗಿ ಮಾಡಿದನು. ಅವರ ಆಸ್ತಿಗಳೆಲ್ಲವನ್ನೂ ಕೊಳ್ಳೆ ಹೊಡೆದನು. ಅವರ ಧಾರ್ಮಿಕ ಗ್ರಂಥಗಳನ್ನೆಲ್ಲಾ ಚಿಂದಿ ಮಾಡಿ ಬೈತುಲ್ ಮುಕದ್ದಸ್ ಮತ್ತು ಹೈಕಲ್ ಸುಲೈಮಾನ್ ಗಳನ್ನು ಬಲವಂತವಾಗಿ ವಶಪಡಿಸಿದನು. ಯಹೂದಿಗಳನ್ನು ಶಾಶ್ವತವಾಗಿ ಪ್ಯಾಲಸ್ತೀನ್ನಿಂದ ಗಡೀಪಾರು ಮಾಡಿದನು.
ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ದಯೆ ತೋರಲೂಬಹುದು. ನೀವು ಅದನ್ನೇ ಪುನರಾವರ್ತಿಸಿದರೆ ನಾವು ಕೂಡ ಪುನರಾವರ್ತಿಸುವೆವು. ನಾವು ಸತ್ಯನಿಷೇಧಿಗಳಿಗೆ ನರಕಾಗ್ನಿಯನ್ನು ಕಾರಾಗೃಹವನ್ನಾಗಿ ಮಾಡಿದ್ದೇವೆ.
ನಾವು ರಾತ್ರಿ ಮತ್ತು ಹಗಲನ್ನು ಎರಡು ದೃಷ್ಟಾಂತಗಳಾಗಿ ಮಾಡಿದೆವು. ನಾವು ರಾತ್ರಿಯ ದೃಷ್ಟಾಂತವನ್ನು ಮಬ್ಬಾಗಿ ಮತ್ತು ಹಗಲಿನ ದೃಷ್ಟಾಂತವನ್ನು ಪ್ರಕಾಶಮಾನವಾಗಿ ಮಾಡಿದೆವು. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಔದಾರ್ಯವನ್ನು ಅರಸುವುದಕ್ಕಾಗಿ ಮತ್ತು ವರ್ಷಗಳ ಸಂಖ್ಯೆ ಹಾಗೂ ಲೆಕ್ಕವನ್ನು ತಿಳಿಯುವುದಕ್ಕಾಗಿ. ನಾವು ಎಲ್ಲಾ ವಿಷಯಗಳನ್ನೂ ಸ್ಪಷ್ಟವಾಗಿ ವಿವರಿಸಿದ್ದೇವೆ.
ನಾವು ಪ್ರತಿಯೊಬ್ಬ ವ್ಯಕ್ತಿಯ ಶುಭ-ಅಶುಭವನ್ನು ಅವನ ಕೊರಳಿನಲ್ಲಿಯೇ ಬಂಧಿಸಿದ್ದೇವೆ. ಪುನರುತ್ಥಾನ ದಿನದಂದು ನಾವು ಅವನ ಮುಂದೆ ಅವನ ಕರ್ಮಪುಸ್ತಕವನ್ನು ಹಾಜರುಪಡಿಸುವೆವು. ಅವನು ಅದನ್ನು ತೆರೆದಿಟ್ಟ ಸ್ಥಿತಿಯಲ್ಲಿ ಕಾಣುವನು.
ಯಾರಾದರೂ ಸನ್ಮಾರ್ಗವನ್ನು ಸ್ವೀಕರಿಸಿದರೆ ಅವನು ಅವನ ಒಳಿತಿಗಾಗಿಯೇ ಅದನ್ನು ಸ್ವೀಕರಿಸುತ್ತಾನೆ. ಯಾರಾದರೂ ದುರ್ಮಾರ್ಗವನ್ನು ಆರಿಸಿದರೆ ಅವನು ಅವನ ಕೆಡುಕಿಗಾಗಿಯೇ ಅದನ್ನು ಆರಿಸುತ್ತಾನೆ. ಪಾಪಗಳ ಭಾರವನ್ನು ಹೊರುವವರು ಇತರರು ಮಾಡಿದ ಪಾಪಗಳ ಭಾರವನ್ನು ಹೊರುವುದಿಲ್ಲ. ಒಬ್ಬ ಸಂದೇಶವಾಹಕರನ್ನು ಕಳುಹಿಸುವ ತನಕ ನಾವು ಯಾರನ್ನೂ ಶಿಕ್ಷಿಸುವುದಿಲ್ಲ.
ನಾವು ಒಂದು ಊರನ್ನು ನಾಶ ಮಾಡಲು ಬಯಸಿದರೆ, ಅಲ್ಲಿರುವ ಸಂಪನ್ನರಿಗೆ (ಕೆಲವು) ಆದೇಶಗಳನ್ನು ನೀಡುತ್ತೇವೆ. ಅವರು ಅಲ್ಲಿ ದುಷ್ಕೃತ್ಯಗಳನ್ನು ಮಾಡತೊಡಗುತ್ತಾರೆ. ಆಗ ಅವರ ವಿಷಯದಲ್ಲಿ ಶಿಕ್ಷೆಯ ಮಾತು ಸಾಬೀತಾಗುತ್ತದೆ. ನಂತರ ನಾವು ಅದನ್ನು ಸಂಪೂರ್ಣ ನಾಶ ಮಾಡಿ ಬಿಡುತ್ತೇವೆ.
ನೂಹರ ನಂತರ ನಾವು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ಅವನ ದಾಸರು ಮಾಡುವ ಪಾಪಗಳ ಬಗ್ಗೆ ಸಾಕಷ್ಟು ಜ್ಞಾನವುಳ್ಳವನಾಗಿದ್ದಾನೆ ಮತ್ತು ಸೂಕ್ಷ್ಮವಾಗಿ ಗಮನಿಸುವವನಾಗಿದ್ದಾನೆ.
ಯಾರು ಈ ತ್ವರೆಯ ಲೋಕವನ್ನು (ಇಹಲೋಕವನ್ನು) ಮಾತ್ರ ಗುರಿಯಾಗಿಟ್ಟು ಕರ್ಮವೆಸಗುತ್ತಾರೋ, ಅವರಲ್ಲಿ ನಾವು ಬಯಸುವವರಿಗೆ ನಾವು ಇಚ್ಛಿಸುವಷ್ಟನ್ನು ಇಲ್ಲಿಯೇ ತ್ವರಿತವಾಗಿ ನೀಡುವೆವು. ನಂತರ (ಪರಲೋಕದಲ್ಲಿ) ನಾವು ಅವನಿಗೆ ನರಕಾಗ್ನಿಯನ್ನು ನೀಡುವೆವು. ಅವನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಅವಮಾನದೊಂದಿಗೆ ಅದನ್ನು ಪ್ರವೇಶ ಮಾಡುವನು.
ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಮತ್ತು ಮಾತಾಪಿತರಿಗೆ ಒಳಿತು ಮಾಡಬೇಕು ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಆದೇಶಿಸಿದ್ದಾನೆ. ಅವರಲ್ಲೊಬ್ಬರು ಅಥವಾ ಇಬ್ಬರೂ ನಿಮ್ಮ ಉಪಸ್ಥಿತಿಯಲ್ಲಿ ವೃದ್ಧಾಪ್ಯವನ್ನು ತಲುಪಿದ್ದರೆ ಅವರೊಡನೆ “ಛೇ” ಎಂದು ಹೇಳಬೇಡಿ. ಅವರನ್ನು ಗದರಿಸಬೇಡಿ. ಅವರೊಡನೆ ಗೌರವದಿಂದ ಮಾತನಾಡಿರಿ.
ಅವರಿಬ್ಬರ ಮುಂದೆ ದಯೆಯಿಂದ ಕೂಡಿದ ವಿನಯದ ರೆಕ್ಕೆಯನ್ನು ತಗ್ಗಿಸಿ ನಿಲ್ಲಿರಿ. “ನನ್ನ ಪರಿಪಾಲಕನೇ! ಬಾಲ್ಯದಲ್ಲಿ ಇವರು ನನ್ನನ್ನು ಸಾಕಿ ಸಲಹಿದಂತೆ ಇವರಿಗೆ ದಯೆ ತೋರು” ಎಂದು ಪ್ರಾರ್ಥಿಸಿರಿ.
ನಿಮ್ಮ ಮನಸ್ಸುಗಳಲ್ಲಿ ಏನಿದೆಯೆಂದು ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನೀವು ನೀತಿವಂತರಾಗಿದ್ದರೆ—ಪಶ್ಚಾತ್ತಾಪಪಟ್ಟು ಮರಳುವವರಿಗೆ ಅವನು ಅತ್ಯಧಿಕ ಕ್ಷಮಿಸುವವನಾಗಿದ್ದಾನೆ.
ನೀವು ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಿರೀಕ್ಷಿಸುವ ದಯೆಯನ್ನು ಕಾಯುತ್ತಿರುವ ಕಾರಣ, ಅವರಿಂದ ಮುಖ ತಿರುಗಿಸಬೇಕಾಗಿ ಬಂದರೆ, ಅವರೊಡನೆ ಬಹಳ ಮೃದುವಾಗಿ ಮಾತನಾಡುತ್ತಾ ಅದನ್ನು ಮನವರಿಕೆ ಮಾಡಿಕೊಡಿ.[1]
[1] ಅಂದರೆ ನೀವು ಆರ್ಥಿಕವಾಗಿ ದುರ್ಬಲರಾಗಿರುವ ಸಂದರ್ಭದಲ್ಲಿ—ಇಂತಹ ಸಂದರ್ಭಗಳಲ್ಲಿ ಎಲ್ಲರೂ ಅಲ್ಲಾಹನ ದಯೆಯನ್ನು ನಿರೀಕ್ಷಿಸುತ್ತಾರೆ—ಆಗ ನಿಮ್ಮ ಬಳಿಗೆ ಸಹಾಯ ಕೇಳಿ ಬರುವ ಸಂಬಂಧಿಕರು, ಬಡವರು ಮುಂತಾದವರಿಂದ ಮುಖ ತಿರುಗಿಸಬೇಕಾಗಿ ಬಂದರೆ, ಅಂದರೆ ಅವರಿಗೆ ನಿಮ್ಮ ಅಸಹಾಯಕತೆಯನ್ನು ತಿಳಿಸಬೇಕಾಗಿ ಬಂದರೆ, ಗಟ್ಟಿ ಸ್ವರದಲ್ಲಿ ಗದರಿಸುವ ರೀತಿಯಲ್ಲಿ ವರ್ತಿಸಬೇಡಿ. ಬದಲಿಗೆ, ಮೃದುವಾಗಿ ಮತ್ತು ಸೌಮ್ಯವಾಗಿ ಅವರಿಗೆ ನಿಮ್ಮ ಪರಿಸ್ಥಿತಿಯನ್ನು ತಿಳಿಸಿಕೊಡಿ.
ನೀವು ನಿಮ್ಮ ಕೈಯನ್ನು ಕೊರಳಿಗೆ ಕಟ್ಟಿದಂತೆ ಇಡಬೇಡಿ. ಅಥವಾ ಅದನ್ನು ಸಂಪೂರ್ಣವಾಗಿ ಬಿಚ್ಚಿಕೊಂಡಂತೆಯೂ ಇಡಬೇಡಿ.[1] ಹಾಗೇನಾದರೂ ಆದರೆ ನೀವು ಅವಮಾನಿತರು ಮತ್ತು ಅಸಹಾಯಕರಾಗಿ ಕೂರಬೇಕಾದೀತು.
[1] ಅಂದರೆ ನೀವು ಏನೂ ಖರ್ಚು ಮಾಡದೆ ಜಿಪುಣತನ ತೋರಬೇಡಿ. ಅದೇ ರೀತಿ ಅಮಿತವಾಗಿಯೂ ಖರ್ಚು ಮಾಡಬೇಡಿ.
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು (ಅವನು ಇಚ್ಛಿಸುವವರಿಗೆ) ಇಕ್ಕಟ್ಟುಗೊಳಿಸುತ್ತಾನೆ. ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ತಿಳಿದವನು ಮತ್ತು ವೀಕ್ಷಿಸುವವನಾಗಿದ್ದಾನೆ.
ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲಬೇಡಿ. ಯಾರಾದರೂ ಅನ್ಯಾಯವಾಗಿ ಕೊಲೆಯಾದರೆ ಅವನ ವಾರಸುದಾರರಿಗೆ ನಾವು (ಪ್ರತೀಕಾರ ಪಡೆಯುವ) ಅಧಿಕಾರವನ್ನು ನೀಡಿದ್ದೇವೆ. ಆದರೆ ಕೊಲೆ ಮಾಡುವಾಗ ಅವನು ಎಲ್ಲೆ ಮೀರಬಾರದು.[1] ನಿಶ್ಚಯವಾಗಿಯೂ ಅವನಿಗೆ ಸಹಾಯ ಮಾಡಲಾಗುವುದು.
[1] ಕೊಲೆಯಾದವರ ಕಡೆಯವರು ಪ್ರತೀಕಾರ ಪಡೆಯುವಾಗ ಎಲ್ಲೆ ಮೀರಬಾರದು. ಅಂದರೆ ಒಬ್ಬನ ಬದಲಿಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಕೊಲ್ಲುವುದು, ಕೊಂದ ನಂತರ ಅಂಗಾಂಗಗಳನ್ನು ಬೇರ್ಪಡಿಸುವುದು, ಕ್ರೂರವಾಗಿ ಮತ್ತು ಬರ್ಬರವಾಗಿ ಕೊಲ್ಲುವುದು ಇತ್ಯಾದಿ ಮಾಡಬಾರದು.
ಅನಾಥರು ಪ್ರೌಢರಾಗುವ ತನಕ ಅವರ ಆಸ್ತಿಯನ್ನು ಒಳಿತು ಮಾಡುವ ಉದ್ದೇಶದಿಂದಲ್ಲದೆ ಮುಟ್ಟಬೇಡಿ. ಕರಾರುಗಳನ್ನು ನೆರವೇರಿಸಿರಿ. ನಿಶ್ಚಯವಾಗಿಯೂ ಕರಾರಿನ ಬಗ್ಗೆ ನಿಮ್ಮೊಡನೆ ಪ್ರಶ್ನಿಸಲಾಗುವುದು.
ಇವೆಲ್ಲವೂ ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ವಿವೇಕದೊಂದಿಗೆ ಅವತೀರ್ಣಗೊಳಿಸಿದ ದೇವವಾಣಿಯಲ್ಲಿ ಸೇರಿದ್ದಾಗಿವೆ. ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಮಾಡಬೇಡಿ. ಹಾಗೇನಾದರೂ ಆದರೆ ಆಕ್ಷೇಪಾರ್ಹ ಮತ್ತು ಬಹಿಷ್ಕೃತ ಸ್ಥಿತಿಯಲ್ಲಿ ನಿಮ್ಮನ್ನು ನರಕಕ್ಕೆ ಎಸೆಯಲಾಗುವುದು.
ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಗಂಡುಮಕ್ಕಳನ್ನು ಆಯ್ಕೆ ಮಾಡಿ, ತನಗೋಸ್ಕರ ದೇವದೂತರುಗಳನ್ನು ಹೆಣ್ಣುಮಕ್ಕಳಾಗಿ ಸ್ವೀಕರಿಸಿಕೊಂಡನೇ? ನಿಜಕ್ಕೂ ನೀವು ಬಹಳ ಗಂಭೀರ ಮಾತನ್ನು ಹೇಳುತ್ತಿದ್ದೀರಿ.
ಹೇಳಿರಿ: “ಅವರು ಹೇಳುವಂತೆ ಅಲ್ಲಾಹನ ಜೊತೆಗೆ ಬೇರೆ ದೇವರುಗಳು ಇರುತ್ತಿದ್ದರೆ, ಅವರು ಖಂಡಿತವಾಗಿಯೂ ಸಿಂಹಾಸನದ ಒಡೆಯನ (ಅಲ್ಲಾಹನ) ಕಡೆಗೆ ಒಂದು ದಾರಿಯನ್ನು ಹುಡುಕುತ್ತಿದ್ದರು.”[1]
[1] ಬಹುದೇವಾರಾಧಕರು ಹೇಳುವಂತೆ ಅಲ್ಲಾಹನೊಂದಿಗೆ ಬೇರೆ ದೇವರುಗಳು ಇರುತ್ತಿದ್ದರೆ ಅವರು ಅಲ್ಲಾಹನ ವಿರುದ್ಧ ಹೋರಾಡಿ ಅಧಿಕಾರ ವಶಪಡಿಸುವ ಮಾರ್ಗವನ್ನು ಹುಡುಕುತ್ತಿದ್ದರು. ಹಾಗೇನಾದರೂ ಸಂಭವಿಸುತ್ತಿದ್ದರೆ ವಿಶ್ವವು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೆ ಈ ತನಕ ಹಾಗೇನೂ ಸಂಭವಿಸಿಲ್ಲ. ಆದ್ದರಿಂದ ಅಲ್ಲಾಹನ ಹೊರತು ಬೇರೆ ದೇವರಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷ್ಯವಾಗಿದೆ.
ಏಳಾಕಾಶಗಳು, ಭೂಮಿ ಮತ್ತು ಅವುಗಳಲ್ಲಿರುವ ಎಲ್ಲರೂ ಅವನ ಪರಿಶುದ್ಧತೆಯನ್ನು ಕೊಂಡಾಡುತ್ತಾರೆ. ಅವನ ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡದಿರುವ ಯಾವುದೇ ವಸ್ತುವಿಲ್ಲ. ಆದರೆ ನಿಮಗೆ ಅವರ ಸ್ತುತಿಕೀರ್ತನೆಗಳನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ನಿಶ್ಚಯವಾಗಿಯೂ ಅವನು ಸಹಿಷ್ಣುತೆಯುಳ್ಳವನು ಮತ್ತು ಕ್ಷಮಿಸುವವನಾಗಿದ್ದಾನೆ.
ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳ ಮೇಲೆ ಪರದೆಗಳನ್ನು ಮತ್ತು ಅವರ ಕಿವಿಗಳಿಗೆ ಭಾರಗಳನ್ನು ಇಡುತ್ತೇವೆ. ನೀವು ಕುರ್ಆನ್ನಲ್ಲಿ ನಿಮ್ಮ ಪರಿಪಾಲಕನ (ಅಲ್ಲಾಹನ) ಏಕತ್ವವನ್ನು ಉಲ್ಲೇಖಿಸಿದರೆ ಅವರು ದ್ವೇಷದಿಂದ ಬೆನ್ನು ತಿರುಗಿಸಿ ನಡೆಯುತ್ತಾರೆ.
ಅವರು ಅದಕ್ಕೆ ಕಿವಿಗೊಡುವಾಗ, ಅವರು ಯಾವ ಉದ್ದೇಶದಿಂದ ಅದಕ್ಕೆ ಕಿವಿಗೊಡುತ್ತಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ಅವರು ಸಮಾಲೋಚನೆ ಮಾಡುವ ಸಂದರ್ಭದಲ್ಲಿ ಮತ್ತು “ನೀವು ಮಾಟ ಮಾಡಲಾದ ವ್ಯಕ್ತಿಯನ್ನೇ ಅನುರಿಸುತ್ತಿದ್ದೀರಿ” ಎಂದು ಆ ಅಕ್ರಮಿಗಳು ಹೇಳುವಾಗಲೂ (ನಾವು ಅವರ ಬಗ್ಗೆ ಚೆನ್ನಾಗಿ ತಿಳಿದಿದ್ದೇವೆ).
ಅಥವಾ ನಿಮ್ಮ ಹೃದಯಗಳಲ್ಲಿ ಹಿರಿದಾಗಿ ಕಾಣುವ ಯಾವುದಾದರೂ ಸೃಷ್ಟಿಯಾಗಿ ಬಿಡಿ. (ಏನೇ ಆದರೂ ನಿಮ್ಮನ್ನು ಜೀವ ನೀಡಿ ಎಬ್ಬಿಸಲಾಗುವುದು)”. ಅವರು ಕೇಳುತ್ತಾರೆ: “ನಮಗೆ ಪುನಃ ಜೀವ ನೀಡುವುದು ಯಾರು?” ಹೇಳಿರಿ: “ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದವನು.” ಆಗ ಅವರು ನಿಮ್ಮ ಕಡೆಗೆ ತಲೆಯಾಡಿಸುತ್ತಾ ಕೇಳುತ್ತಾರೆ: “ಅದು ಯಾವಾಗ?” ಹೇಳಿರಿ: “ಅದು ಸಮೀಪದಲ್ಲೇ ಆಗಿರಬಹುದು.”
ನನ್ನ ದಾಸರೊಡನೆ, ಅವರು ಅತ್ಯುತ್ತಮ ಮಾತುಗಳನ್ನೇ ಆಡಲಿ ಎಂದು ಹೇಳಿರಿ. ನಿಶ್ಚಯವಾಗಿಯೂ ಶೈತಾನನು ಅವರ ನಡುವೆ (ಸಂಘರ್ಷವನ್ನು) ಹುಟ್ಟುಹಾಕುತ್ತಾನೆ. ನಿಶ್ಚಯವಾಗಿಯೂ ಶೈತಾನನು ಮನುಷ್ಯನ ಪ್ರತ್ಯಕ್ಷ ಶತ್ರುವಾಗಿದ್ದಾನೆ.
ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಿಮ್ಮ ಬಗ್ಗೆ ಚೆನ್ನಾಗಿ ತಿಳಿದಿದೆ. ಅವನು ಇಚ್ಛಿಸಿದರೆ ನಿಮಗೆ ದಯೆ ತೋರುವನು ಅಥವಾ ಅವನು ಇಚ್ಛಿಸಿದರೆ ನಿಮ್ಮನ್ನು ಶಿಕ್ಷಿಸುವನು. (ಪ್ರವಾದಿಯವರೇ) ನಾವು ನಿಮ್ಮನ್ನು ಅವರ ಮೇಲ್ವಿಚಾರಣೆ ಮಾಡಲು ಕಳುಹಿಸಿಲ್ಲ.
ಭೂಮ್ಯಾಕಾಶಗಳಲ್ಲಿರುವವರ ಬಗ್ಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನಾವು ಕೆಲವು ಪ್ರವಾದಿಗಳನ್ನು ಇತರ ಪ್ರವಾದಿಗಳಿಗಿಂತ ಶ್ರೇಷ್ಠಗೊಳಿಸಿದ್ದೇವೆ. ನಾವು ದಾವೂದರಿಗೆ ಝಬೂರ್ ನೀಡಿದ್ದೇವೆ.
ಹೇಳಿರಿ: “ನೀವು ಅಲ್ಲಾಹನನ್ನು ಬಿಟ್ಟು (ಅಲ್ಲಾಹನ ಸಹಭಾಗಿಗಳೆಂದು) ನೀವು ವಾದಿಸುತ್ತಿರುವ ನಿಮ್ಮ ದೇವರುಗಳನ್ನು ಕರೆದು ಪ್ರಾರ್ಥಿಸಿರಿ. ನಿಮ್ಮಿಂದ ಯಾವುದೇ ತೊಂದರೆಯನ್ನು ನಿವಾರಿಸಲು ಅಥವಾ ನಿಮ್ಮ ಸ್ಥಿತಿಯನ್ನು ಬದಲಾಯಿಸಲು ಅವರಿಗೆ ಸಾಧ್ಯವಿಲ್ಲ.”
ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ, ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಹತ್ತಿರವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ.[1] ಅವರಲ್ಲಿ ಅಲ್ಲಾಹನಿಗೆ ಹೆಚ್ಚು ಹತ್ತಿರವಾಗುವುದು ಯಾರು ಎಂದು. ಅವರು ಅವನ ದಯೆಯನ್ನು ಆಶಿಸುತ್ತಾರೆ ಮತ್ತು ಅವನ ಶಿಕ್ಷೆಯನ್ನು ಹೆದರುತ್ತಾರೆ. ಖಂಡಿತವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಹೆದರಬೇಕಾದುದೇ ಆಗಿದೆ.
[1] ಅಂದರೆ ದೇವದೂತರುಗಳು, ಪ್ರವಾದಿಗಳು ಮತ್ತು ಮಹಾಪುರುಷರು. ಬಹುದೇವಾರಾಧಕರಲ್ಲಿ ಅನೇಕರು ದೇವದೂತರುಗಳನ್ನು ಆರಾಧಿಸುತ್ತಿದ್ದರು. ಯಹೂದಿಗಳು ಪ್ರವಾದಿ ಉಝೈರ್ (ಎಜ್ರಾ) ರನ್ನು ಮತ್ತು ಕ್ರೈಸ್ತರು ಪ್ರವಾದಿ ಈಸಾ (ಯೇಸು) ರನ್ನು ಅಲ್ಲಾಹನ ಪುತ್ರರೆಂದು ಕರೆದು ಆರಾಧಿಸುತ್ತಾರೆ. ಕೆಲವರು ಸಮಾಧಿಗಳಲ್ಲಿರುವ ಮಹಾಪುರುಷರನ್ನು ಆರಾಧಿಸುತ್ತಾರೆ. ವಾಸ್ತವವಾಗಿ ಇವರೆಲ್ಲರೂ ಅಲ್ಲಾಹನ ಇಷ್ಟದಾಸರಾಗಿದ್ದಾರೆ ಮತ್ತು ಅಲ್ಲಾಹನಿಗೆ ಸಮೀಪವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ನೀವು ಅವರನ್ನು ಆರಾಧಿಸುತ್ತಿರುವ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ.
ದೃಷ್ಟಾಂತಗಳನ್ನು ಕಳುಹಿಸಲು ನಮಗೆ ತಡೆಯಾಗಿರುವುದು, ಮೊದಲಿನ ಜನರು ಅವುಗಳನ್ನು ನಿಷೇಧಿಸಿದ್ದರು ಎಂಬುದು ಮಾತ್ರ. ನಾವು ಸಮೂದ್ ಗೋತ್ರಕ್ಕೆ ಅಂತರ್ದೃಷ್ಟಿಯ ರೂಪದಲ್ಲಿ ಒಂಟೆಯನ್ನು ನೀಡಿದೆವು. ಆದರೆ ಅವರು ಅದರೊಡನೆ ಅನ್ಯಾಯವೆಸಗಿದರು. ಜನರನ್ನು ಹೆದರಿಸುವುದಕ್ಕಾಗಿಯೇ ವಿನಾ ನಾವು ದೃಷ್ಟಾಂತಗಳನ್ನು ಕಳುಹಿಸುವುದಿಲ್ಲ.
“ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಜನರನ್ನು ಆವರಿಸಿದ್ದಾನೆ” ಎಂದು ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿ). ನಾವು ನಿಮಗೆ ತೋರಿಸಿದ ಆ ದೃಶ್ಯವನ್ನು ನಾವು ಜನರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿದ್ದೆವು. ಅದೇ ರೀತಿ ಕುರ್ಆನ್ನಲ್ಲಿ ಶಪಿಸಲಾದ ಆ ಮರವನ್ನು ಕೂಡ. ನಾವು ಅವರನ್ನು ಹೆದರಿಸುತ್ತೇವೆ. ಆದರೆ ಅದು ಅವರಿಗೆ ಮಹಾ ಅತಿರೇಕವನ್ನು ಮಾತ್ರ ಹೆಚ್ಚಿಸುತ್ತದೆ.[1]
[1] ಪ್ರವಾದಿ ಮುಹಮ್ಮದರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಾಶಾರೋಹಣ ಮಾಡಿದಾಗ ಅಲ್ಲಿ ನರಕವನ್ನು ಮತ್ತು ಅದರ ಶಿಕ್ಷೆಗಳನ್ನು ನೋಡಿದರು. ಅದನ್ನು ಅವರಿಗೆ ಜನರಿಗೆ ವಿವರಿಸಿದಾಗ ಸತ್ಯನಿಷೇಧಿಗಳು ತೀವ್ರವಾಗಿ ಲೇವಡಿ ಮಾಡಿದರು. ನರಕದಲ್ಲಿರುವ ಝಕ್ಕೂಮ್ ಮರದ ಬಗ್ಗೆ ಹೇಳಿದಾಗಲೂ ವಿರೋಧಿಗಳು ತೀವ್ರವಾಗಿ ಹಾಸ್ಯ ಮಾಡಿದರು.
“ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ನಾವು ದೇವದೂತರುಗಳಿಗೆ ಹೇಳಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು; ಇಬ್ಲೀಸನ ಹೊರತು. ಅವನು ಕೇಳಿದನು: “ನೀನು ಜೇಡಿಮಣ್ಣಿನಿಂದ ಸೃಷ್ಟಿಸಿದವನಿಗೆ ನಾನು ಸಾಷ್ಟಾಂಗ ಮಾಡಬೇಕೇ?”
ಇಬ್ಲೀಸ್ ಹೇಳಿದನು: “ನೀನು ನನಗಿಂತಲೂ ಹೆಚ್ಚು ಶ್ರೇಷ್ಠತೆ ನೀಡಿದ ಈ ವ್ಯಕ್ತಿಯನ್ನು ನೋಡು. ನೀನು ನನಗೆ ಪುನರುತ್ಥಾನದ ದಿನದವರೆಗೆ ಕಾಲಾವಕಾಶ ನೀಡಿದರೆ, ಕೆಲವರನ್ನು ಹೊರತುಪಡಿಸಿ ಇವನ ಸಂಪೂರ್ಣ ಸಂತಾನವನ್ನು ನಾನು ನನ್ನ ವಶಕ್ಕೆ ಪಡೆಯುವೆನು.”
ಅವರಲ್ಲಿ ಯಾರನ್ನೆಲ್ಲಾ ನಿನಗೆ ನಿನ್ನ ಧ್ವನಿಯ ಮೂಲಕ ದಾರಿತಪ್ಪಿಸಲು ಸಾಧ್ಯವಾಗುತ್ತದೋ ದಾರಿತಪ್ಪಿಸು. ನಿನ್ನ ಅಶ್ವದಳ ಮತ್ತು ಪದಾತಿದಳದ ಮೂಲಕ ಅವರ ಮೇಲೆ ಮುಗಿಬೀಳು. ಅವರ ಆಸ್ತಿ ಮತ್ತು ಮಕ್ಕಳಲ್ಲಿ ಅವರೊಡನೆ ಸೇರಿಕೋ. ಅವರಿಗೆ ಆಶ್ವಾಸನೆಗಳನ್ನು ನೀಡು.” ಶೈತಾನನು ಅವರಿಗೆ ನೀಡುವ ಆಶ್ವಾಸನೆಗಳು ಕೇವಲ ವಂಚನೆಗಳಾಗಿವೆ.
ನಿಮಗೋಸ್ಕರ ಕಡಲಲ್ಲಿ ನಾವೆಗಳನ್ನು ಚಲಾಯಿಸುವವನೇ ನಿಮ್ಮ ಪರಿಪಾಲಕನು (ಅಲ್ಲಾಹು). ನೀವು ಅವನ ಔದಾರ್ಯವನ್ನು ಅರಸುವುದಕ್ಕಾಗಿ. ಖಂಡಿತವಾಗಿಯೂ ಅವನಿಗೆ ನಿಮ್ಮ ಮೇಲೆ ಅತ್ಯಧಿಕ ಕರುಣೆಯಿದೆ.
ಕಡಲಲ್ಲಿ ನಿಮಗೇನಾದರೂ ತೊಂದರೆಯಾದರೆ ನೀವು ಅಲ್ಲಾಹನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ ಅವರೆಲ್ಲರೂ ನಿಮ್ಮನ್ನು ಬಿಟ್ಟು ಹೋಗುವರು. ಆದರೆ ಅಲ್ಲಾಹು ನಿಮ್ಮನ್ನು ಸುರಕ್ಷಿತವಾಗಿ ದಡ ಸೇರಿಸಿದರೆ ನೀವು ವಿಮುಖರಾಗುತ್ತೀರಿ. ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ.
ಅವನು ನಿಮ್ಮನ್ನು ದಡದ ಒಂದು ಭಾಗಕ್ಕೆ (ಒಯ್ದು) ಅಲ್ಲಿ ನಿಮ್ಮನ್ನು (ಭೂಮಿಯಲ್ಲಿ) ಹುಗಿಯುವಂತೆ ಮಾಡಲಾರನು ಅಥವಾ ಅವನು ನಿಮ್ಮ ಮೇಲೆ ಕಲ್ಲಿನ ಮಳೆಯನ್ನು ಸುರಿಸಲಾರನೆಂದು ನೀವು ನಿರ್ಭಯರಾಗಿದ್ದೀರಾ? ನಂತರ ನಿಮ್ಮ ಕಾರ್ಯನಿರ್ವಹಣೆ ಮಾಡಲು ನೀವು ಯಾರನ್ನೂ ಕಾಣಲಾರಿರಿ.
ಅಥವಾ ಅವನು ನಿಮ್ಮನ್ನು ಮತ್ತೊಮ್ಮೆ ಕಡಲಿಗೆ ಒಯ್ದು, ನಿಮ್ಮ ಮೇಲೆ ಚಂಡಮಾರುತವನ್ನು ಕಳುಹಿಸಿ, ನೀವು ನಿಷೇಧಿಸಿದ್ದರಿಂದ ನಿಮ್ಮನ್ನು ಕಡಲಲ್ಲಿ ಮುಳುಗಿಸಿ ಬಿಡಲಾರನೆಂದು ನೀವು ನಿರ್ಭಯರಾಗಿದ್ದೀರಾ? ನಂತರ ಅದಕ್ಕಾಗಿ ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ನೀವು ಯಾರನ್ನೂ ಕಾಣಲಾರಿರಿ.
ನಿಶ್ಚಯವಾಗಿಯೂ ನಾವು ಆದಮರ ಮಕ್ಕಳನ್ನು (ಮಾನವರನ್ನು) ಗೌರವಿಸಿದ್ದೇವೆ. ಅವರನ್ನು ಕಡಲಲ್ಲೂ, ನೆಲದಲ್ಲೂ ಸವಾರಿ ಮಾಡಿಸಿದ್ದೇವೆ. ಅವರಿಗೆ ಶುದ್ಧ ವಸ್ತುಗಳಿಂದ ಆಹಾರವನ್ನು ಒದಗಿಸಿದ್ದೇವೆ. ನಮ್ಮ ಅನೇಕ ಸೃಷ್ಟಿಗಳಿಗಿಂತ ಹೆಚ್ಚು ನಾವು ಅವರಿಗೆ ಶ್ರೇಷ್ಠತೆಯನ್ನು ನೀಡಿದ್ದೇವೆ.
ನಾವು ಎಲ್ಲಾ ಮನುಷ್ಯರನ್ನೂ ಅವರ ಮುಖಂಡರೊಂದಿಗೆ ಕರೆದು ಒಟ್ಟುಗೂಡಿಸುವ ದಿನ. ಆಗ ಯಾರಿಗೆ ಅವನ ಕರ್ಮಪುಸ್ತಕವನ್ನು ಅವನ ಬಲಗೈಯಲ್ಲಿ ನೀಡಲಾಗುತ್ತದೋ—ಅವರು ತಮ್ಮ ಕರ್ಮಪುಸ್ತಕವನ್ನು ಓದುವರು. ಅವರಿಗೆ (ಖರ್ಜೂರದ ಬೀಜದಲ್ಲಿರುವ) ನೂಲಿನಷ್ಟೂ ಅನ್ಯಾಯವಾಗುವುದಿಲ್ಲ.
ನಾವು ನಿಮಗೆ ನೀಡುತ್ತಿರುವ ಈ ದೇವವಾಣಿಯಿಂದ ನಿಮ್ಮನ್ನು ತಪ್ಪಿಸಿಬಿಡಲು ಅವರು ಬಯಸುತ್ತಾರೆ. ನೀವು ನಮ್ಮ ಮೇಲೆ ಇದಲ್ಲದ ಬೇರೇನಾದರೂ ಸುಳ್ಳುಗಳನ್ನು ಆರೋಪಿಸುವುದಕ್ಕಾಗಿ. ಹಾಗೇನಾದರೂ ಆದರೆ ಅವರು ನಿಮ್ಮನ್ನು ಆಪ್ತಮಿತ್ರನಾಗಿ ಸ್ವೀಕರಿಸುತ್ತಿದ್ದರು.
ಹಾಗೇನಾದರೂ ಆದರೆ, ನಾವು ನಿಮಗೆ ಬದುಕಿರುವಾಗ ಇಮ್ಮಡಿ ಶಿಕ್ಷೆಯನ್ನು ಮತ್ತು ಮರಣದ ನಂತರ ಇಮ್ಮಡಿ ಶಿಕ್ಷೆಯನ್ನು ನೀಡುತ್ತಿದ್ದೆವು. ನಂತರ ನಮ್ಮ ವಿರುದ್ಧ ಸಹಾಯ ಮಾಡುವ ಯಾರನ್ನೂ ನೀವು ಕಾಣಲಾರಿರಿ.
ಅವರು ನಿಮ್ಮನ್ನು ಈ ಊರಿನಿಂದ ಇನ್ನೇನು ತೊಲಗಿಸುವುದರಲ್ಲಿದ್ದರು. ನಿಮ್ಮನ್ನು ಇಲ್ಲಿಂದ ಓಡಿಸುವುದೇ ಅವರ ಉದ್ದೇಶವಾಗಿದೆ. ಹಾಗೇನಾದರೂ ಆದರೆ, ನಿಮ್ಮ ನಂತರ ಅವರು ಅಲ್ಪ ಸಮಯದವರೆಗೆ ಮಾತ್ರ ಅಲ್ಲಿ ವಾಸಿಸುತ್ತಿದ್ದರು.
ಸೂರ್ಯನು (ಮಧ್ಯರೇಖೆಯಿಂದ) ಸರಿಯುವ ಸಮಯದಿಂದ ತೊಡಗಿ ಕತ್ತಲಾಗುವ ತನಕ ನಮಾಝ್ ಸಂಸ್ಥಾಪಿಸಿರಿ. ಪ್ರಭಾತದ ಕುರ್ಆನ್ ಪಠಣ ಮಾಡಿರಿ. ಪ್ರಭಾತದ ಕುರ್ಆನ್ ಪಠಣವು ಸಾಕ್ಷಿಯಾಗಿರುತ್ತದೆ.[1]
[1] ಮಧ್ಯಾಹ್ನದ ನಂತರ ರಾತ್ರಿಯವರೆಗೆ ನಾಲ್ಕು ನಮಾಝ್ಗಳಿವೆ. ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ. ಪ್ರಭಾತದ ಕುರ್ಆನ್ ಎಂದರೆ ಫಜ್ರ್ ನಮಾಝ್. ಫಜ್ರ್ ನಮಾಝ್ನ ಸಮಯದಲ್ಲಿ ದೇವದೂತರುಗಳು ಹಾಜರಾಗುತ್ತಾರೆ. ಮಾತ್ರವಲ್ಲ, ಆ ಸಮಯದಲ್ಲಿ ರಾತ್ರಿಯ ದೇವದೂತರುಗಳು ಮತ್ತು ಹಗಲಿನ ದೇವದೂತರುಗಳು ಸಮ್ಮಿಲನಗೊಳ್ಳುತ್ತಾರೆ.
ರಾತ್ರಿಯ ಕೆಲವು ಸಮಯದಲ್ಲಿ ತಹಜ್ಜುದ್ ನಮಾಝ್ ಮಾಡುತ್ತಾ ಕುರ್ಆನ್ ಪಠಿಸಿರಿ. ಇದು ನಿಮಗೆ ಮಾತ್ರವಿರುವ ಹೆಚ್ಚಳವಾಗಿದೆ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ಸ್ತುತ್ಯರ್ಹ ಸ್ಥಾನಕ್ಕೆ ಕಳುಹಿಸಲೂಬಹುದು.[1]
[1] ತಹಜ್ಜುದ್ ನಮಾಝ್ ಎಂದರೆ ರಾತ್ರಿಯಲ್ಲಿ ಎದ್ದು ನಿರ್ವಹಿಸುವ ನಮಾಝ್. ಈ ನಮಾಝ್ ಕಡ್ಡಾಯವಲ್ಲ. ಆದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದು ಕಡ್ಡಾಯವಾಗಿದೆ. ಸ್ತುತ್ಯರ್ಹ ಸ್ಥಾನ (ಮಕಾಮೆ ಮಹ್ಮೂದ್) ಎಂದರೆ ಪುನರುತ್ಥಾನ ದಿನದಂದು ಅಲ್ಲಾಹು ಪ್ರವಾದಿ ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶೇಷವಾಗಿ ನೀಡುವ ಸ್ಥಾನ. ಜನರೆಲ್ಲರನ್ನೂ ವಿಚಾರಣೆಗೆ ಕರೆಯಲು ಅವರು ಈ ಸ್ಥಾನದಲ್ಲಿ ನಿಂತು ಅತಿದೊಡ್ಡ ಶಿಫಾರಸು (ಶಫಾಅತ್ ಉಝ್ಮಾ) ಮಾಡುತ್ತಾರೆ.
ಹೇಳಿರಿ: “ನನ್ನ ಪರಿಪಾಲಕನೇ! ನನ್ನನ್ನು ಎಲ್ಲಿಗೆ ಪ್ರವೇಶ ಮಾಡಿಸಿದರೂ ಉತ್ತಮವಾಗಿ ಪ್ರವೇಶ ಮಾಡಿಸು ಮತ್ತು ಎಲ್ಲಿಂದ ನಿರ್ಗಮಿಸುವಂತೆ ಮಾಡಿದರೂ ಉತ್ತಮವಾಗಿ ನಿರ್ಗಮಿಸುವಂತೆ ಮಾಡು. ನನಗೆ ನಿನ್ನ ಕಡೆಯಿಂದ ಅಧಿಕಾರ ಮತ್ತು ಸಹಾಯವನ್ನು ನೀಡು.”
ಹೇಳಿರಿ: “ಈ ಕುರ್ಆನಿನಂತಿರುವ ಒಂದು ಗ್ರಂಥವನ್ನು ರಚಿಸಿ ತರಲು ಮನುಷ್ಯರು ಮತ್ತು ಜಿನ್ನ್ಗಳು ಒಟ್ಟು ಸೇರಿದರೂ ಇಂತಹ ಒಂದು ಗ್ರಂಥವನ್ನು ತರಲು ಅವರಿಗೆ ಸಾಧ್ಯವಿಲ್ಲ. ಅವರು ಪರಸ್ಪರ ಸಹಾಯ ಮಾಡಿದರೂ ಸಹ.”
ಅಥವಾ ನಿನಗೆ ಬಂಗಾರದ ಮನೆಯುಂಟಾಗುವ ತನಕ, ಅಥವಾ ನೀನು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಲಾಗುವ ಒಂದು ಪುಸ್ತಕವನ್ನು ನೀನು ನಮಗೆ ಇಳಿಸಿಕೊಡುವ ತನಕ ನೀನು ಏರಿ ಹೋಗಿದ್ದೀ ಎಂದು ನಾವು ಖಂಡಿತ ನಂಬುವುದಿಲ್ಲ.” (ಪ್ರವಾದಿಯವರೇ) ಹೇಳಿರಿ: “ನನ್ನ ಪರಿಪಾಲಕನು (ಅಲ್ಲಾಹು) ಪರಿಶುದ್ಧನು! ನಾನು ಒಬ್ಬ ಮನುಷ್ಯನಾದ ಸಂದೇಶವಾಹಕ ಮಾತ್ರವಾಗಿದ್ದೇನೆ.”[1]
[1] ಅಂದರೆ ನಾನು ನಿಮ್ಮಂತಹ ಒಬ್ಬ ಮನುಷ್ಯ. ನೀವು ಹೇಳುವ ಈ ಕಾರ್ಯಗಳನ್ನು ಮಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಆದ್ದರಿಂದ ಇವೆಲ್ಲವನ್ನೂ ಮಾಡಿ ತೋರಿಸಬೇಕೆಂದು ನೀವು ನನ್ನೊಡನೆ ಕೇಳುವುದರಲ್ಲಿ ಅರ್ಥವಿಲ್ಲ. ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅವನ ಸಂದೇಶಗಳನ್ನು ನಿಮಗೆ ತಲುಪಿಸಿಕೊಡುವುದು ಮಾತ್ರ ನನ್ನ ಕೆಲಸ. ನೀವು ಕೇಳುವಾಗಲೆಲ್ಲಾ ಪವಾಡಗಳನ್ನು ತೋರಿಸುವುದು ನನ್ನ ಕೆಲಸವಲ್ಲ. ಆದರೆ ಅಲ್ಲಾಹು ನನ್ನ ಮೂಲಕ ಪವಾಡ ತೋರಿಸಲು ಬಯಸಿದರೆ ನಾನು ಪವಾಡವನ್ನು ತೋರಿಸಬಲ್ಲೆ.
ಜನರಿಗೆ ಸನ್ಮಾರ್ಗವು ಬಂದ ಬಳಿಕವೂ ಅವರು ಅದರಲ್ಲಿ ವಿಶ್ವಾಸವಿಡದಂತೆ ತಡೆಯಾಗಿರುವುದು, “ಅಲ್ಲಾಹು ಒಬ್ಬ ಮನುಷ್ಯನನ್ನು ಸಂದೇಶವಾಹಕನಾಗಿ ಕಳುಹಿಸಿದನೇ?” ಎಂಬ ಅವರ ಮಾತು ಮಾತ್ರವಾಗಿತ್ತು.
ಅಲ್ಲಾಹು ಯಾರಿಗೆ ಸನ್ಮಾರ್ಗವನ್ನು ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದುರ್ಮಾರ್ಗಿಯಾಗಿ ಮಾಡುತ್ತಾನೋ—ಅವರಿಗೆ ಅವನಲ್ಲದೆ ಬೇರೆ ರಕ್ಷಕರನ್ನು ನೀವು ಕಾಣಲಾರಿರಿ. ಪುನರುತ್ಥಾನ ದಿನದಂದು ನಾವು ಅವರನ್ನು ಅವರ ಮುಖದ ಮೇಲೆ ನಡೆಯುವವರಾಗಿ ಒಟ್ಟುಗೂಡಿಸುವೆವು. ಆಗ ಅವರು ಕುರುಡರು, ಮೂಕರು ಮತ್ತು ಕಿವುಡರಾಗಿರುವರು. ನರಕಾಗ್ನಿಯೇ ಅವರ ವಾಸಸ್ಥಳ. ಅದು ತಣ್ಣಗಾಗುವಾಗಲೆಲ್ಲಾ ನಾವು ಅದನ್ನು ಭುಗಿಲೇಳುವಂತೆ ಉರಿಸುವೆವು.
ಅದು ಅವರಿಗೆ ನೀಡಲಾಗುವ ಪ್ರತಿಫಲವಾಗಿದೆ. ಏಕೆಂದರೆ ಅವರು ನಮ್ಮ ವಚನಗಳನ್ನು ನಿಷೇಧಿಸಿದರು ಮತ್ತು ಅವರು ಕೇಳಿದರು: “ನಾವು ಮೂಳೆಗಳು ಮತ್ತು ಚಿಂದಿ ಅವಶೇಷಗಳಾಗಿ ಬಿಟ್ಟ ಬಳಿಕವೂ ನಮ್ಮನ್ನು ಹೊಸ ಸೃಷ್ಟಿಯಾಗಿ ಎಬ್ಬಿಸಲಾಗುವುದೇ?”
ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಅವರಂತಹ ಇನ್ನೊಂದು ಸೃಷ್ಟಿಯನ್ನು ಸೃಷ್ಟಿಸುವ ಶಕ್ತಿಯಿದೆಯೆಂದು ಅವರು ನೋಡುವುದಿಲ್ಲವೇ? ಅವನು ಅವರಿಗೆ ಒಂದು ಅವಧಿಯನ್ನು ನಿಶ್ಚಯಿಸಿದನು. ಅದರಲ್ಲಿ ಸಂಶಯವೇ ಇಲ್ಲ. ಆದರೆ ಅಕ್ರಮಿಗಳು ನಿಷೇಧಿಸುವುದನ್ನಲ್ಲದೆ ಬೇರೇನೂ ಮಾಡುವುದಿಲ್ಲ.
ನಾವು ಮೂಸಾರಿಗೆ ಒಂಬತ್ತು ಸ್ಪಷ್ಟ ದೃಷ್ಟಾಂತಗಳನ್ನು ನೀಡಿದ್ದೆವು.[1] ನೀವು ಇಸ್ರಾಯೇಲ್ ಮಕ್ಕಳೊಡನೆ ಮೂಸಾ ಅವರ ಬಳಿಗೆ ಬಂದಾಗ ಸಂದರ್ಭದ ಬಗ್ಗೆ ಕೇಳಿ ನೋಡಿ. ಆಗ ಫರೋಹ ಹೇಳಿದನು: “ಓ ಮೂಸಾ! ನೀನು ಖಂಡಿತ ಮಾಟಕ್ಕೊಳಗಾಗಿದ್ದೀ ಎಂದು ನನಗೆ ತೋರುತ್ತಿದೆ.”
[1] ಒಂಬತ್ತು ದೃಷ್ಟಾಂತಗಳು ಎಂದರೆ ಸರ್ಪವಾಗಿ ಮಾರ್ಪಡುವ ಕೋಲು, ಬೆಳ್ಳಗಾಗುವ ಕೈ, ಬರಗಾಲ, ಹಣ್ಣುಗಳ ಅಭಾವ, ಚಂಡಮಾರುತ, ಮಿಡತೆ, ಹೇನು, ಕಪ್ಪೆ ಮತ್ತು ರಕ್ತ.
ಮೂಸಾ ಹೇಳಿದರು: “ಭೂಮ್ಯಾಕಾಶಗಳ ಪರಿಪಾಲಕನೇ (ಅಲ್ಲಾಹನೇ) ಇವುಗಳನ್ನು ಸ್ಪಷ್ಟ ದೃಷ್ಟಾಂತಗಳಾಗಿ ಅವತೀರ್ಣಗೊಳಿಸಿದ್ದಾನೆಂದು ಖಂಡಿತವಾಗಿಯೂ ನಿನಗೆ ತಿಳಿದಿದೆ. ಓ ಫರೋಹ! ಖಂಡಿತವಾಗಿಯೂ ನೀನು ಸರ್ವನಾಶವಾಗುವೆ ಎಂದು ನನಗೆ ತೋರುತ್ತಿದೆ.”
ನಾವು ಇದನ್ನು (ಕುರ್ಆನನ್ನು) ಸತ್ಯದೊಂದಿಗೇ ಅವತೀರ್ಣಗೊಳಿಸಿದ್ದೇವೆ ಮತ್ತು ಅದು ಸತ್ಯದೊಂದಿಗೇ ಅವತೀರ್ಣವಾಗಿದೆ. ನಾವು ನಿಮ್ಮನ್ನು ಸುವಾರ್ತೆ ತಿಳಿಸುವುದಕ್ಕಾಗಿ ಮತ್ತು ಮುನ್ನೆಚ್ಚರಿಕೆ ನೀಡುವುದಕ್ಕಾಗಿಯೇ ಹೊರತು ಕಳುಹಿಸಿಲ್ಲ.
ನೀವು ಈ ಕುರ್ಆನನ್ನು ಜನರಿಗೆ ಸಾವಕಾಶವಾಗಿ ಓದಿಕೊಡುವುದಕ್ಕಾಗಿ ನಾವು ಇದನ್ನು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿದ್ದೇವೆ. ನಾವು ಅದನ್ನು ನಿಮಗೆ ಹಂತ ಹಂತವಾಗಿ ಅವತೀರ್ಣಗೊಳಿಸಿದ್ದೇವೆ.
ಹೇಳಿರಿ “ನೀವು ಇದರಲ್ಲಿ (ಕುರ್ಆನ್ನಲ್ಲಿ) ವಿಶ್ವಾಸವಿಡಿ ಅಥವಾ ವಿಶ್ವಾಸವಿಡಬೇಡಿ. ನಿಶ್ಚಯವಾಗಿಯೂ ಇದಕ್ಕೆ ಮೊದಲು ಜ್ಞಾನ ನೀಡಲಾದವರು ಯಾರೋ—ಅವರಿಗೆ ಇದನ್ನು ಓದಿಕೊಟ್ಚರೆ ಅವರು ಸಾಷ್ಟಾಂಗ ಮಾಡುತ್ತಾ ಗಲ್ಲಗಳ ಮೇಲೆ ಬೀಳುತ್ತಾರೆ.”
(ಪ್ರವಾದಿಯವರೇ) ಹೇಳಿರಿ: “ನೀವು ಅಲ್ಲಾಹು ಎಂದು ಕರೆಯಿರಿ ಅಥವಾ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ಹೆಸರಲ್ಲಿ ಕರೆದರೂ ಅವನಿಗೆ ಅತ್ಯುತ್ತಮವಾದ ಹೆಸರುಗಳಿವೆ.” ನೀವು ನಮಾಝನ್ನು ಏರಿದ ಧ್ವನಿಯಲ್ಲಿ ನಿರ್ವಹಿಸಬೇಡಿ. ಸಂಪೂರ್ಣ ತಗ್ಗಿದ ಧ್ವನಿಯಲ್ಲೂ ನಿರ್ವಹಿಸಬೇಡಿ. ಬದಲಿಗೆ, ಅವುಗಳ ನಡುವಿನ ಮಾರ್ಗವನ್ನು ಹುಡುಕಿರಿ.
ಹೇಳಿರಿ: “ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ಅವನಿಗೆ ಯಾವುದೇ ಸಂತಾನವಿಲ್ಲ. ವಿಶ್ವದ ಆಧಿಪತ್ಯದಲ್ಲಿ ಅವನಿಗೆ ಯಾವುದೇ ಪಾಲುದಾರರಿಲ್ಲ. ಯಾವುದೇ ಸಂರಕ್ಷಕನನ್ನು ಇಟ್ಟುಕೊಳ್ಳುವಷ್ಟು ಅವನು ದುರ್ಬಲನೂ ಅಲ್ಲ. ಅವನ ಮಹತ್ವವನ್ನು ಪೂರ್ಣರೀತಿಯಲ್ಲಿ ಕೊಂಡಾಡಿರಿ.”
Contents of the translations can be downloaded and re-published, with the following terms and conditions:
1. No modification, addition, or deletion of the content.
2. Clearly referring to the publisher and the source (QuranEnc.com).
3. Mentioning the version number when re-publishing the translation.
4. Keeping the transcript information inside the document.
5. Notifying the source (QuranEnc.com) of any note on the translation.
6. Updating the translation according to the latest version issued from the source (QuranEnc.com).
7. Inappropriate advertisements must not be included when displaying translations of the meanings of the Noble Quran.
Mga Resulta ng Paghahanap:
API specs
Endpoints:
Sura translation
GET / https://quranenc.com/api/v1/translation/sura/{translation_key}/{sura_number} description: get the specified translation (by its translation_key) for the speicified sura (by its number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114)
Returns:
json object containing array of objects, each object contains the "sura", "aya", "translation" and "footnotes".
GET / https://quranenc.com/api/v1/translation/aya/{translation_key}/{sura_number}/{aya_number} description: get the specified translation (by its translation_key) for the speicified aya (by its number sura_number and aya_number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114) aya_number: [1-...] (Aya number in the sura)
Returns:
json object containing the "sura", "aya", "translation" and "footnotes".