ಅವನು ನಿಮ್ಮೆಲ್ಲರನ್ನು ಒಂದೇ ಜೀವದಿಂದ ಸೃಷ್ಟಿಸಿರುವನು. ತರುವಾಯ ಅದರಿಂದ ಅದರ ಜೋಡಿಯನ್ನು ಉಂಟು ಮಾಡಿದನು ಹಾಗೂ ನಿಮಗಾಗಿ ಜಾನುವಾರುಗಳಿಂದ ಎಂಟು ವರ್ಗ ಗಂಡು ಹೆಣ್ಣುಗಳನ್ನು ಇಳಿಸಿರುವನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಲ್ಲಿ ಒಂದು ಸೃಷ್ಟಿ ಹಂತದ ಬಳಿಕ ಮತ್ತೊಂದು ಸೃಷ್ಟಿ ಹಂತವನ್ನಾಗಿ ಮೂರು ಅಂಧಕಾರಗಳಲ್ಲಿ ಸೃಷ್ಟಿಸುವನು. ಅವನೇ ನಿಮ್ಮ ಪ್ರಭುವು ಅಲ್ಲಾಹನಾಗಿದ್ದಾನೆ. ಅಧಿಪತ್ಯವು ಅವನದೇ ಆಗಿರುವುದು. ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ಹಾಗಿದ್ದೂ ನೀವೆತ್ತ ಅಲೆದಾಡುತ್ತಿರುವಿರಿ?
ನೀವು ಕೃತಘ್ನತೆ ತೋರುವುದಾದರೆ ಅಲ್ಲಾಹನು ನಿಮ್ಮಿಂದ ನಿರಪೇಕ್ಷನಾಗಿದ್ದಾನೆ ಹಾಗೂ ಅವನು ತನ್ನ ದಾಸರ ಪಾಲಿಗೆ ಕೃತಘ್ನತೆಯನ್ನು ಮೆಚ್ಚುವುದಿಲ್ಲ ಮತ್ತು ನೀವು ಕೃತಜ್ಞತೆ ತೋರುವುದಾದರೆ ಅದನ್ನು ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ ಮತ್ತು ಪಾಪ ಭಾರ ಹೊರುವವನು ಮತ್ತೊಬ್ಬನ ಭಾರವನ್ನು ಹೊರಲಾರನು. ತರುವಾಯ ನಿಮ್ಮೆಲ್ಲರ ಮರಳುವಿಕೆಯು ನಿಮ್ಮ ಪ್ರಭುವಿನೆಡೆಗೇ ಆಗಿದೆ. ನೀವು ಮಾಡುತ್ತಿದ್ದಿದ್ದನ್ನು ಅವನು ನಿಮಗೆ ತಿಳಿಸಿಕೊಡುವನು. ಖಂಡಿತವಾಗಿಯು ಅವನು ಮನಸ್ಸಿನಲ್ಲಿರುವ ಸಂಗತಿಗಳನ್ನು ಚೆನ್ನಾಗಿಬಲ್ಲನು.
ಮನುಷ್ಯನಿಗೆ ಯಾವುದಾದರೂ ವಿಪತ್ತು ಬಾಧಿಸಿದಾಗ ಅವನು ತನ್ನ ಪ್ರಭುವಿನೆಡೆಗೆ ಮರಳಿ ವಿನಮ್ರತೆಯಿಂದ ಅವನನ್ನು ಕರೆದುಬೇಡುತ್ತಾನೆ. ತರುವಾಯ ಅಲ್ಲಾಹನು ತನ್ನ ವತಿಯಿಂದ ಯಾವುದಾದರೂ ಅನುಗ್ರಹವನ್ನು ಅವನಿಗೆ ದಯಪಾಲಿಸಿದರೆ. ಅವನು ಇದಕ್ಕೆ ಮೊದಲು ತಾನು ಅವನೆಡೆಗೆ ಮೊರೆಯಿಟ್ಟಿರುವುದನ್ನು (ಸಂಪೂರ್ಣವಾಗಿ) ಮರೆತು ಬಿಡುತ್ತಾನೆ ಮತ್ತು ಇತರರನ್ನು ಅವನ ಮಾರ್ಗದಿಂದ ಭ್ರಷ್ಟಗೊಳಿಸಲು ಅಲ್ಲಾಹನಿಗೆ ಸರಿಸಮಾನರನ್ನು ನಿಶ್ಚಯಿಸುತ್ತಾನೆ. ಓ ಪೈಗಂಬರರೇ, ಹೇಳಿರಿ ಈ ಸತ್ಯನಿಷೇಧದ ಲಾಭವನ್ನು ಅಲ್ಪ ಕಾಲ ಭೋಗಿಸು. ಖಂಡಿತವಾಗಿಯು ನೀನು ನರಕವಾಸಿಗಳಲ್ಲಿ ಸೇರಲಿರುವೆ.
ಹೇಳಿರಿ: ಓ ನನ್ನ ಸತ್ಯವಿಶ್ವಾಸಿ ದಾಸರೇ, ನೀವು ನಿಮ್ಮ ಪ್ರಭುವನ್ನು ಭಯಪಡುತ್ತಿರಿ. ಇಹಲೋಕದಲ್ಲಿ ಒಳಿತನ್ನು ಮಾಡುವವರಿಗೇ ಸತ್ಫಲವಿರುವುದು ಮತ್ತು ಅಲ್ಲಾಹನ ಭೂಮಿಯು ವಿಶಾಲವಾಗಿರುವುದು. ಖಂಡಿತವಾಗಿಯು ಸಹನಶೀಲರಿಗೆ ಅವರ ಪ್ರತಿಫಲವನ್ನು ಲೆಕ್ಕಾತೀತವಾಗಿ ನೀಡಲಾಗುವುದು.